ಭಟ್ಕಳ, ಜನವರಿ 19:ನೆಹರೂ ಯುವಕೇಂದ್ರ ಕಾರವಾರ ಹಾಗೂ ವೀರ ಸಾವರ್ಕರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ(ರಿ) ಸರ್ಪನಕಟ್ಟೆ, ಭಟ್ಕಳ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಅಂತರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.
ಕಬ್ಬಡ್ಡಿ ಪಂದ್ಯದಲ್ಲಿ ಮುಠ್ಠಳ್ಳಿಯ ಪರಶುರಾಮ ತಂಡ ಪ್ರಥಮ ಹಾಗೂ ಚೌಥನಿಯ ಜಟಕೇಶ್ವರ ತಂಡ ದ್ವೀತಿಯ ಸ್ಥಾನ ಪಡೆದುಕೊಂಡರು. ವಾಲಿಬಾಲ್ ಪಂದ್ಯಾವಳಿಯಲ್ಲಿ ಕುದುರೆ ಬೀರಪ್ಪ ಎ. ಪ್ರಥಮ ಹಾಗೂ ಗೋಳಿಬಿಳೂರು ಮಹಾಗಣಪತಿ ತಂಡ ದ್ವೀತಿಯ ಸ್ಥಾನ ಪಡೆದುಕೊಂಡರು. ಅಲ್ಲದೇ ಗುಂಡು ಎಸೆತ, ಚಕ್ರ ಎಸೆತ, ೧೦೦ಮೀ ಓಟ ಮೊದಲಾದ ಪಂದ್ಯಾವಳಿಗಳಲ್ಲಿ ವಿಜೇತರಾದವರಿಗೆ ಶಾಶ್ವತ ಫಲಕ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.ಬೆಳಕೆಯ ಜಿ.ವಿ.ಎಸ್.ಎಸ್. ಬ್ಯಾಂಕ್ ಇದರ ವ್ಯವಸ್ಥಾಪಕರಾದ ಅಣ್ಣಪ್ಪ ನಾಯ್ಕ ಬಹುಮಾನ ವಿತರಿಸಿದರು. ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ನಾಯ್ಕ, ವೀರ ಸಾವರ್ಕರ್ ಸಮಾಜ ಸಮಿತಿಯ ಅಧ್ಯಕ್ಷ ಲಕ್ಷ್ಮಿನಾರಾಯಣ ಎಂ. ನಾಯ್ಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ನಾಗರಾಜ ಜೆ. ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿಯಾದ ನಾಗರಾಜ ಎಸ್. ನಾಯ್ಕ ಸ್ವಾಗತಿಸಿದರು. ಸೀತಾರಾಮ ಎಂ. ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.